ಡಾ . ರಾಮಮನೋಹರ ಲೋಹಿಯಾರವರ ಸಮಾಜವಾದದ ಕಲ್ಪನೆ ನಿಜಕ್ಕೂ ಅದ್ಭುತ ಹಾಗೂ ಒಂದು ಕ್ರಾಂತಿ. ಇತ್ತಿಚೆಗೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಾಗೋಡು ಸತ್ಯಾಗ್ರಹದ ನೆನಪಿನಗೊಸ್ಕರ ಒಂದು ಚಿಂತನಾಗೋಷ್ಠಿ ಏರ್ಪಡಿಸಿದ್ದರು. ಚಿಂತನಾ ವಿಷಯ ‘ಜಾಗತಿಕರಣ ಮತ್ತು ನಮ್ಮ ಕೃಷಿ ವ್ಯವಸ್ಥೆ’.
ಈ ಸಭೆಯ ಮುಖ್ಯಾಂಶಗಳು ಹೀಗಿವೆ,
- ಇಂದಿನ ಪೀಳಿಗೆಗೆ ಹೋರಾಟ ಬೇಡವಾಗಿದೆ. ಹೋರಾಟದ ಆಸಕ್ತಿ ಸತ್ತು ಹೋಗಿದೆ.
- ಕೃಷಿವಲಯ ಅಪಾಯದಲ್ಲಿದೆ. ಉತ್ಪಾದನೆ ಕಡಿಮೆಯಾಗಿದ್ದು ಮತ್ತು ಜನಸಂಖ್ಯೆ ಬೆಳೆಯುತ್ತಲೇ ಇದೆ
- ಗ್ರಾಮೀಣ ರೈತರು ಇನ್ನೂ ಮೂಲ ಸೌಕರ್ಯದಿಂದ ವಂಚಿತರಾಗಿಯೇ ಉಳಿದಿರುತ್ತಾರೆ
- ಸರಕಾರ ಮನಸ್ಸು ಮಾಡಿದರೆ ಎಲ್ಲಾ ಸಾದ್ಯ, ಬದಲಾವಣೆಯತ್ತ ಸರಕಾರ ಚಿಂತಿಸಬೇಕು
- ಕೃಷಿ ಸಂಸ್ಕೃತಿ ಹಾಗೂ ಬೆಳೆ ಪದ್ದತಿ ನಾಶವಾಗಿವೆ.
- ಅಭಿವೃದ್ಧಿಯೆಂಬುದು ದೊಡ್ಡರೋಗ . ಅಭಿವೃದ್ಧಿ ಕಾಯಿಲೆಯ ಪರಿಣಾಮ ನಿಸರ್ಗ ಬರಿದಾಗುತ್ತಿದೆ. ಹಣಕ್ಕೆ ಮಹತ್ವ ನೀಡದೇ ನಿಸರ್ಗ ಮಾದರಿ ಜೀವನಶೈಲಿ ರೂಢಿಸಿಕೊಳ್ಳಬೇಕು.
- ತಂತ್ರಜ್ಞಾನ ಬೆಳೆದಂತೆಲ್ಲಾ ಅದರಿಂದಾಗುವ ಅನುಕೂಲ ಮತ್ತು ಅನಾನುಕೂಲ ಪರಿಣಾಮಗಳ ಬಗ್ಗೆ ಚಿಂತಿಸಬೇಕು.
- ಬೋಪಾಲ ದುರಂತಕ್ಕೆ ಕಾರಣವಾದ ಕಂಪನಿಗಳಂತಹ ನಾಲ್ಕು ಕಂಪನಿಗಳು ರಾಜ್ಯಕ್ಕೆ ಬಂದರೆ ರಾಜ್ಯದ ಸರ್ವನಾಶ ಖಂಡಿತ.
- ಪಾಳೆಕರ ಸಾರುತ್ತಿರುವ ಸಾವಯವ ಕೃಷಿ ಎಂಬುದು ಕೃಷಿ ವಿಧಾನವೇ ಅಲ್ಲ, ಸಾವಯವ ಗೊಬ್ಬರ ಮಾಡುವ ವಿಧಾನವದು.
ಚಿಂತನಾಗೋಷ್ಠಿ ಮತ್ತವೇ ಯೋಚನೆ, ವಿಚಾರಗಳ ಸುತ್ತ ಗಿರಕಿ ಹೊಡೆದು ಸಭೆ ತುಂಬಾ ಬೋರೆನಿಸಿತು. ನಮ್ಮ ನಡುವೆ ಇರುವ ಬುದ್ಧಿಜೀವಿಗಳಿಗೆ ಹೊಸ ವಿಚಾರಗಳು ಹೊಳೆಯುತ್ತಿಲ್ಲವೆನಿಸುತ್ತೆ. ಮಾತೆತ್ತಿದರೆ ಅದು ಸರಿಯಿಲ್ಲ, ಇದು ಸರಿಯಲ್ಲ. ಒಳ್ಳೆಯವರು ರಾಜಕಾರಣಕ್ಕೆ ಬರಬೇಕು ಎನ್ನುತ್ತಾರೆ. ಹೌದು, ಇವುಗಳಿಗೆ ಪರಿಹಾರ ಸೂಚಿಸುತ್ತಾರೆಯೇ ? ಇಲ್ಲ. ಇಂಥ ಸಮಾರಂಭಗಳನ್ನು ಆಯೋಜಿಸುವುದು ಸಮಯ, ಖರ್ಚು ಮತ್ತು ಶಕ್ತಿಗಳೆಲ್ಲವೂ ವ್ಯಥಾ ವ್ಯರ್ಥ. ಏಕೆಂದರೆ ಚಿಂತಕರೆನಿಕೊಂಡವರು ಹೊಸ ವಿಚಾರಗಳಿಲ್ಲದೇ ಕೊಳಕು ವಿಚಾರಗಳನ್ನು ಹರಿಸುವರು . ಪತ್ರಕರ್ತರು ಅವರ ಕೈಗೊಂಬೆಗಳಂತೆ ಅವರ ಪರವಾಗಿಯೇ ಬರೆಯುತ್ತಾರೆ. ಅಪರೂಪವೆಂಬಂತೆ ಜಲ ಪರಿಸರ ತಜ್ಞರಾಗಿರುವ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯರವರು ಕೃಷಿಯ ಅಂಕಿ ಅಂಶಗಳನ್ನು ಚೆಲ್ಲಿದರು, ಪತ್ರಕರ್ತ ಪಿ ಸಾಯಿನಾಥರವರ ಲೇಖನದ ಒಂದಂಶವನ್ನು ಉಸುರಿದರು.
ಇಂತಹ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳುವುದಕ್ಕಿಂತ, ಜನರನ್ನು ಕೃಷಿಯ ಕಡೆಗೆ ಸೆಳೆಯಲು ಪ್ರಯತ್ನಿಸಬೇಕು. ಹುರಿದುಂಬಿಸುವ ಕಾರ್ಯವಾಗಬೇಕು. ಮೊದಲು ಯುವ ವಿದ್ಯಾರ್ಥಿ ಸಮುದಾಯವನ್ನು ಕೃಷಿ ವಿದ್ಯಾಲಯಗಳ ಕಡೆಗೆ ಆಸಕ್ತಿ ವಹಿಸುವಂತೆ ತಿಳಿಹೇಳುವ ಹೊಸಕ್ರಾಂತಿಯನ್ನು ಹುಟ್ಟುಹಾಕಬೇಕು. ಆಮೇಲೆ ವೈದ್ಯಕೀಯ, ತಾಂತ್ರಿಕ ಶಿಕ್ಷಣ ವಿದ್ಯಾಲಯಗಳನ್ನು ತೆರೆಯದಿರುವಂತೆ ಮತ್ತು ಹೆಚ್ಚು ಹೆಚ್ಚು ಕೃಷಿ ವಿದ್ಯಾಲಯಗಳ ತೆರೆಯುವಂತೆ ಸರ್ಕಾರಕ್ಕೆ ಒತ್ತಾಯ ಹೇರಬೇಕು. ಕೃಷಿ ವಿದ್ಯಾಲಯದ ಪ್ರವೇಶ ನಿಯಮಗಳನ್ನು ಸಡಿಲಿಸಿ ಪದವಿಪೂರ್ವ ಶಿಕ್ಷಣದಲ್ಲಿ ಕಲೆ, ವಾಣಿಜ್ಯ ವಿಷಯಗಳನ್ನು ಅದ್ಯಯನ ಮಾಡಿದವರಿಗೆ ಸಹ ಅವಕಾಶ ಕಲ್ಪಿಸಿಕೊಡಬೇಕು. ಈ ಮೂಲಕ ನಮ್ಮ ಭೂಮಿಯನ್ನು ಉಳಿಸಿದಂತಾಗುವುದಲ್ಲದೆ ರಾಸಾಯನಿಕಯುಕ್ತ ಆಹಾರ ಪ್ರಮಾಣವನ್ನು ತಗ್ಗಿಸಬಹುದು. ಇದರಿಂದ ಜನರ ಆರೋಗ್ಯವಲ್ಲದೆ. ಆಹಾರ ಸಮಸ್ಯೆಯನ್ನು ನೀಗಬಹುದಾಗಿದೆ. ಕೊನೆಯದಾಗಿ ಹೇಳಬಹುದಾದರೆ ಕೃಷಿ ಬಲ್ಲ ಒಬ್ಬ ವ್ಯಕ್ತಿ ಜಗದ ಯಾವ ಮೂಲೆಯಲ್ಲಾದರೂ ನಿಶ್ಚಿಂತೆಯಿಂದ ಜೀವನ ಸಾಗಿಸಬಹುದು.
– ಮುರಳೀಧರ ಸಜ್ಜನ.